ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ: ಯುವತಿ ಸಾವು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರಿಸಿದೆ. ಅಬ್ಬರಿಸಿದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜೀವನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ನೆರೆ ಭೀತಿ ಎದುರಾಗಿದೆ. ಅಲ್ಲಲ್ಲಿ ಭೂ ಕುಸಿತ, ಗುಡ್ಡ ಕುಸಿತ, ರಸ್ತೆ ಕುಸಿತದಿಂದಾಗಿ ಸಂಚಾರ ವ್ಯತ್ಯಯಗೊಂಡಿದೆ. ನಿರಂತರ ಮಳೆಗೆ ಅಲ್ಲಲ್ಲಿ ಕೃತಕ ನೆರೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿ ಮನೆಗಳಿಗೆ ನೀರು ನುಗ್ಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಹಲವು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಬೆಳ್ತಂಗಡಿ, ಬಂಟ್ವಾಳ, ಕಡಬ, ಪುತ್ತೂರು, ಸುಳ್ಯದ ಶಾಲೆಯಿಂದ ಪಿಯುಸಿ ತನಕ ವಿದ್ಯಾಸಂಸ್ಥೆಗಳಿಗೆ ರಜೆ ನೀಡಲಾಗಿದೆ.
ಜಿಲ್ಲೆಯ ಮೂಡುಬಿದಿರೆಯಲ್ಲಿ ಶುಕ್ರವಾರ ಬೆಳಗಿನವರೆಗೆ ಗರಿಷ್ಠ ೧೭೬.೯ ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯ ದಿನದ ಸರಾಸರಿ ಮಳೆ ೧೨೦.೫ ಮಿ.ಮೀ. ಆಗಿದೆ.
ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ ನದಿ ಅಪಾಯ ಮಟ್ಟ ಸನಿಹ ೨೯.೯ ಮೀಟರ್(ಅಪಾಯ ಮಟ್ಟ ೩೧.೫ ಮೀಟರ್) ಹರಿಯುತ್ತಿದೆ. ಬಂಟ್ವಾಳದಲ್ಲಿ ನೇತ್ರಾವತಿ ನದಿ ಅಪಾಯ ಮಟ್ಟ ಮೀರಿ ೮.೬ ಮೀಟರ್ (ಅಪಾಯ ಮಟ್ಟ ೮.೫ ಮೀಟರ್) ಹರಿಯುತ್ತಿದೆ. ಹೊಸ ಡ್ಯಾಂನ ಎಲ್ಲ ಗೇಟ್ಗಳನ್ನು ತೆರೆಯಲಾಗಿದೆ.
ಅಪಾಯದಂಚಿನಲ್ಲಿ ಮನೆಗಳು..
ಭಾರೀ ಮಳೆಯಿಂದಾಗಿ ಹರೇಕಳ ಪಾವೂರು ಪ್ರದೇಶದಲ್ಲಿ ನೇತ್ರಾವತಿ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು ಪಾವೂರು ಅಜೆರುಳಿಯ ಎಂಬಲ್ಲಿ ಸುಮಾರು ಐದು ಮನೆಗಳು ಅಪಾಯ ದಂಚಿನಲ್ಲಿವೆ. ಇನೋಳಿ ಕೆಳಗಿನಕೆರೆ, ನಾಟ್ರಕೋಡಿ ಎಂಬಲ್ಲಿಯೂ ಹಲವು ಮನೆಗಳಿಗೆ ಸಂಪರ್ಕಿಸುವ ರಸ್ತೆಯು ಮುಳುಗಡೆಯಾಗಿ ಸಾರ್ವಜನಿಕರು ತೊಂದರೆ ಎದುರಿಸಿದ್ದಾರೆ.
ಯುವತಿ ಬಲಿ..
ವಿದ್ಯುತ್ ಆಘಾತಕ್ಕೆ ಒಳಗಾಗಿ ಯುವತಿಯೊಬ್ಬಳು ಮೃತಪಟ್ಟ ದಾರುಣ ಘಟನೆ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಕಲ್ಲಕಲಂಬಿ ಎಂಬಲ್ಲಿ ನಡೆದಿದೆ. ಕಲ್ಲಕಲಂಬಿ ನಿವಾಸಿ ಹರೀಶ್ ಶೆಟ್ಟಿ ಎಂಬವರ ಪುತ್ರಿ ಆಶ್ನಿ ಶೆಟ್ಟಿ (೨೦) ಮೃತಪಟ್ಟವರು. ಇವರು ಸಿಎ ಅಭ್ಯಾಸ ಮಾಡುತ್ತಿದ್ದರು.
ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ..
ಫಲ್ಗುಣಿ ನದಿ ತುಂಬಿದರೆ ಮರವೂರು ಬಳಿಯ ಅದ್ಯಪಾಡಿ ಗ್ರಾಮದ ಮುಗೇರಕುದ್ರು ಮುಳುಗುತ್ತದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ಅದ್ಯಪಾಡಿಗೆ ಬಂದು ದೋಣಿಯಲ್ಲಿ ಸಂತ್ರಸ್ತರ ಮನೆಗಳಿಗೆ ತೆರಳಿದ್ದು ನಿವಾಸಿಗಳ ಕಷ್ಟವನ್ನು ಸ್ವತಃ ನೋಡಿ ಮರುಗಿದ್ದಾರೆ. ಇಲ್ಲಿ ೩೫ ಮನೆಗಳಿವೆ.