For the best experience, open
https://m.samyuktakarnataka.in
on your mobile browser.

ಬಸವಣ್ಣನವರು ದೇವರು, ಭಕ್ತರ ನಡುವಿನ ಮಧ್ಯವರ್ತಿ ತೆಗೆದು ಹಾಕಿದ್ದರು

03:16 PM Sep 14, 2024 IST | Samyukta Karnataka
ಬಸವಣ್ಣನವರು ದೇವರು  ಭಕ್ತರ ನಡುವಿನ ಮಧ್ಯವರ್ತಿ ತೆಗೆದು ಹಾಕಿದ್ದರು

ಲಂಡನ್: ಬಸವಣ್ಣನವರು ದೇವರು ಮತ್ತು ಭಕ್ತರ ನಡುವೆ ಇರುವ ಮಧ್ಯವರ್ತಿಗಳನ್ನು ತೆಗೆದು ಹಾಕುವ ಕೆಲಸ ಮಾಡಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಕುಟುಂಬದ ಜೊತೆಗೆ ಲಂಡನ್ ಪ್ರವಾಸದಲ್ಲಿರುವ ಅವರು ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಹಾಗೂ ಯುನೈಟೆಡ್ ಕಿಂಗ್ಲಮ್‌ನ ಬಸವ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಂಡನ್‌ನಲ್ಲಿನ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿ ಮಾತನಾಡಿದರು.
ಲ್ಯಾಂಬೆತ್ ನಗರದ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಅವರು ಇಲ್ಲಿನ ಆಡಳಿತವನ್ನು ಒಪ್ಪಿಸಿ, ಶ್ರಮ ವಹಿಸಿ ಲಂಡನ್ ನಲ್ಲಿ ಜಗಜ್ಯೋತಿ ಬಸವೇಶ್ವರ ಅವರ ಪ್ರತಿಮೆ ನಿರ್ಮಾಣ ಮಾಡಿ, ಇತಿಹಾಸದಲ್ಲಿ ದಾಖಲೆ ಉಳಿಯುವಂತ ಕೆಲಸ ಮಾಡಿದ್ದಾರೆ. ಬಸವೇಶ್ವರ ಅವರು ಮಾನವೀಯ ಮೌಲ್ಯಗಳಿಗೆ ಹೋರಾಡಿದವರು, ಅವರು ಅಸಮಾನತೆಯ ವಿರುದ್ದ ಹೋರಾಟ ಮಾಡಿದ್ದರು. ಸಮಾಜದಲ್ಲಿರುವ ಮೇಲು ಕೀಳು ಭಾವನೆ ಹೊಡೆದೋಡಿಸಲು, ಹೆಣ್ಣು ಗಂಡಿನ ನಡುವಿನ ತಾರತಮ್ಯ ಹೋಗಲಾಡಿಸಲು, ಸಮಾಜದಲ್ಲಿರುವ ಮೂಡ ನಂಬಿಕೆ ಹೋಗಲಾಡಿಸಲು ಅವರು ಹೋರಾಡಿದ್ದರು.
ಬಸವಣ್ಣನವರು ದೇವರು ಮತ್ತು ಭಕ್ತರ ನಡುವೆ ಇರುವ ಮಧ್ಯವರ್ತಿಗಳನ್ನು ತೆಗೆದು ಹಾಕುವ ಕೆಲಸ ಮಾಡಿದ್ದರು. ಅದು ಮಹತ್ವದ ಕಾರ್ಯವಾಗಿತ್ತು. ಇದು ಮಧ್ಯವರ್ತಿಗಳ ಕಾಲವಾಗಿದೆ. ಬಸವಣ್ಣ ಅವರು ವಚನಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದು, ಅವು ಇಂದಿಗೂ ನಮ್ಮೆಲ್ಲರ ಜೀವನಕ್ಕೆ ಪ್ರೇರಣೆಯಾಗಿವೆ ಎಂದು ಹೇಳಿದರು.
ಅಗರವಾಲ್ ಅವರು ಲಂಡನ್ ನಲ್ಲಿ ಹತ್ತು ವರ್ಷಗಳ ಕಾಲ ಉಪ ಮೇಯರ್ ಆಗುವ ಮೂಲಕ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದಾರೆ‌‌. ಲಂಡನ್ ನ ಉಪ ಮೇಯರ್ ಆಗುವುದು ಎಷ್ಟೊಂದು ಬದಲಾವಣೆಗಳಿಗೆ ಕಾರಣವಾಗಲಿದೆ ಎನ್ನುವುದು ನನಗೆ ಗೊತ್ತಿದೆ. ನಿವು ಲಂಡನ್ ಇನ್ನಷ್ಟು ಉನ್ನತ ಹುದ್ದೆಗಳಿಗೆ ಏರುವಂತಾಗಲಿ ಎಂದರು.
ಲ್ಯಾಂಬೆತ್ ನಗರದ ಮಾಜಿ‌ ಮೇಯರ್ ಯಾವಾಗಲೂ ಉತ್ಸಾಹಿಗಳಾಗಿ ಟಾಪ್ ಗೇರ್ ನಲ್ಲಿ ಕೆಲಸ ಮಾಡುತ್ತಾರೆ. ಅವರು ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತಾರೆ. ಅವರ ಈ ಉತ್ಸಾಹದಿಂದಲೇ ಸಮಾಜ ಸುಧಾರಕ ಬಸವೇಶ್ವರ ಅವರ ಪ್ರತಿಮೆಯನ್ನು ಲಂಡನ್ ನಲ್ಲಿ ಸ್ಥಾಪಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ನಾವು ಪಾಶ್ಚಿಮಾತ್ಯ ತತ್ವಜ್ಞಾನಿಗಳ ಬಗ್ಗೆ ಬಹಳಷ್ಟು ತಿಳಿದುಕೊಂಡಿದ್ದೇವೆ‌. ಪೂರ್ವಾತ್ಯ ತತ್ವಜ್ಞಾನಿಗಳು ಮಾನವೀಯ ಮೌಲ್ಯಗಳ ಬಗ್ಗೆ ಬೋಧನೆ ಮಾಡಿದ್ದಾರೆ. ಬಸವಣ್ಣನವರ ತತ್ವಗಳು ಅತ್ಯಂತ ಸರಳ, ನೇರ ನುಡಿಯಿಂದ ಕೂಡಿದ್ದು, ಜೀವನದ ಪಾಠವನ್ನು ಕಲಿಸುವಂತಿವೆ. ಬಸವಣ್ಣವನರ ಕಾಲದಲ್ಲಿ ಆರಂಭವಾದ ಸಮಾಜ ಸುಧಾರಣೆಯ ಕುರಿತು ಚರ್ಚೆ ನಡೆಯುತ್ತಿದ್ದ, ಜಗತ್ತಿನ ಮೊದಲ ಪಾರ್ಲಿಮೆಂಟ್ ಅನುಭವ ಮಂಪಟ ಮ್ಯಾಗ್ನಾಕಾರ್ಟ್ ಗಿಂತಲೂ ಮೊದಲೇ ಪ್ರಾರಂಭವಾಗಿದ್ದು ಜಗತ್ತಿಗೆ ತಿಳಿದಿದೆ.
ಪ್ರಧಾನಿ ನರೇಂದ್ರ ಮೋದಿಯವರೂ ಬಸವಣ್ಣನವರ ಅನುನಾಯಿಯಾಗಿದ್ದು, ಸಂಸತ್ತಿನಲ್ಲಿಯೂ ಕೂಡ ಪ್ರಧಾನಿ ನರೇಂದ್ರ ಮೋದಿಯವರು ಬಸವಣ್ಣನವರ ತತ್ವಗಳ ಕುರಿತು ಮಾತನಾಡಿದ್ದಾರೆ‌ ಎಂದರು.
ಲಂಡನ್ ನಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪನೆಯ ದಶಮಾನೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ‌ ಮೋದಿಯವರು ಪಾಲ್ಗೊಳ್ಳಬೇಕೆನ್ನುವುದು ನೀರಜ್ ಪಾಟೀಲ್ ಅವರ ಬಯಕೆಯಾಗಿದೆ. ನಾನು ಈಗಾಗಲೇ ಪತ್ರ ಬರೆದಿದ್ದೇನೆ. ಎರಡೂ ದೇಶಗಳ ಪ್ರಧಾನಿಗಳು ಪಾಲ್ಗೊಳ್ಳಬೇಕಾದರೆ ರಾಜತಾಂತ್ರಿಕ ಪ್ರಕ್ರಿಯೆಗಳ ಮೂಲಕ ಕಾರ್ಯಕ್ರಮದ ಆಹ್ವಾನ ನೀಡಬೇಕಿದೆ. ಈ ಕುರಿತು ವಿದೇಶಾಂಗ ಇಲಾಖೆಯ ಜೊತೆಗೆ ಮಾತನಾಡುತ್ತೇನೆ. ಪ್ರಧಾನಿಯವರ ಮುಂದಿನ ಲಂಡನ್ ಪ್ರವಾಸದ ಸಂದರ್ಭದಲ್ಲಿ ಅವರ ಕಾರ್ಯಕ್ರಮದ ಪಟ್ಟಿಯಲ್ಲಿ ಈ ಕಾರ್ಯಕ್ರಮವನ್ನೂ ಸೇರಿಸುವ ಪ್ರಯತ್ನ ಮಾಡಲಾಗುವುದು. ಬಸವಣ್ಣನವರ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಖಂಡಿತವಾಗಿ ಬರುವ ವಿಶ್ವಾಸ ಇದೆ. ಆದರೆ, ರಾಜತಾಂತ್ರಿಕ ಪ್ರಕ್ರಿಯೆಗಳು ಮುಖ್ಯವಾಗಿದೆ ಎಂದು ಹೇಳಿದರು.
ಬಸವಣ್ಣ ವಿಶ್ವ ಮಾನವ ಆಗಿದ್ದು ಅದೇ ಕಾರಣಕ್ಕೆ ಅವರನ್ನು ಜಗಜ್ಯೋತಿ ಬಸವಣ್ಣ ಎಂದು ಕರೆಯುತ್ತಾರೆ. ಲಂಡನ್ ನಲ್ಲಿ ಸ್ಥಾಪನೆ ಆಗಿರುವ ಪ್ರತಿಮೆ ಅದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಲ್ಯಾಂಬೆತ್ ಮಾಜಿ ಮೇಯರ್ ಡಾ. ನೀರಾಜ್ ಪಾಟೀಲ್, ಬಸವ ಸಮಿತಿಯ ಅಧಿಕಾರಿಗಳಾದ ಅಭಿಜಿತ್ ಸಾಲಿಯಂಥ್ ಮತ್ತು ರಂಗನಾಥ ಮಿರ್ಜಿ ಅವರು ಬ್ರಿಟಿಷ್ ಭಾರತೀಯ ಮತ್ತು ಕನ್ನಡ ಸಮುದಾಯವನ್ನು ಪ್ರತಿನಿಧಿಸುತ್ತಾ ಸಮಾರಂಭದ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಲಂಡನ್‌ನ ಮಾಜಿ ಉಪಮೇಯರ್ ರಾಜೇಶ್ ಅಗರ್ವಾಲ್ , ಕನ್ನಡ ಬಳಗ, ಕನ್ನಡಿಗರು ಯುಕೆ ಮತ್ತು ಭಾರತೀಯ ವಿದ್ಯಾ ಭವನದ ಗಣ್ಯರು ಭಾಗವಹಿಸಿದ್ದರು.

Tags :