ಬೆಳಗಾವಿ ನನ್ನ ಕರ್ಮಭೂಮಿ
ಬುಧವಾರದಿಂದಲೇ ಚುನಾವಣಾ ಪ್ರಚಾರ ಆರಂಭ
ಹುಬ್ಬಳ್ಳಿ ನನ್ನ ಜನ್ಮಭೂಮಿಯಾದರೆ ಬೆಳಗಾವಿ ಜಿಲ್ಲೆ ನನ್ನ ಕರ್ಮಭೂಮಿ. ಆ ಜಿಲ್ಲೆಯಲ್ಲಿ ಎರಡು ಬಾರಿ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ.
ಹುಬ್ಬಳ್ಳಿ : ಈ ಚುನಾವಣೆಯನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ಜಾತಿ ಲೆಕ್ಕಾಚಾರ ಪರಿಣಾಮ ಬೀರಲ್ಲ. ಎಲ್ಲ ಜಾತಿ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುತ್ತೇನೆ. ಬುಧವಾರದಿಂದಲೇ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಪ್ರಾರಂಭ ಮಾಡಲಿದ್ದೇನೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷದ ಬೆಳಗಾವಿಯ ಎಲ್ಲ ನಾಯಕರು, ಮುಖಂಡರೊಂದಿಗೆ ಮಾತನಾಡಿದ್ದೇನೆ. ಬನ್ನಿ ಎಲ್ಲರೂ ಕೂಡಿಕೊಂಡು ಚುನಾವಣೆ ಮಾಡೋಣ. ಮೂರನೇ ಬಾರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡೋಣ ಎಂದಿದ್ದಾರೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಶೆಟ್ಟರ ಹೇಳಿದರು.
ಸಂಸದೆ ಮಂಗಳಾ ಅಂಗಡಿ ಕುಟುಂಬಸ್ಥರು ತುಂಬಾ ಸಂತೋಷ ವ್ಯಕ್ತಪಡಿಸಿದ್ದಾರೆ. ಅವರೂ ಪ್ರಚಾರ ಮಾಡಲಿದ್ದಾರೆ. ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಸಹೋದರರು ಬೆಂಬಲಿಸಲಿದ್ದಾರೆ ಎಂದು ಹೇಳಿದರು.
ಹುಬ್ಬಳ್ಳಿ ನನ್ನ ಜನ್ಮಭೂಮಿಯಾದರೆ ಬೆಳಗಾವಿ ಜಿಲ್ಲೆ ನನ್ನ ಕರ್ಮಭೂಮಿ. ಆ ಜಿಲ್ಲೆಯಲ್ಲಿ ಎರಡು ಬಾರಿ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಬೆಳಗಾವಿ ಜಿಲ್ಲೆ ನನ್ನ ಜಿಲ್ಲೆ ಎಂದು ಕೆಲಸ ಮಾಡಿದ್ದೇನೆ. ಕಾರ್ಯಕರ್ತರು, ಮುಖಂಡರು, ಜಿಲ್ಲೆಯ ಜನರ ಸಂಪರ್ಕ ಇದೆ ಎಂದು ತಿಳಿಸಿದರು. ಬುಧವಾರ ಕ್ಷೇತ್ರಕ್ಕೆ ತೆರಳಿದ್ದು, ಗೋಕಾಕ, ಅರಭಾವಿ, ಸವದತ್ತಿ, ಬೆಳಗಾವಿನಗರ, ಗ್ರಾಮೀಣ, ಬೈಲಹೊಂಗಲ ಸೇರಿದಂತೆ ಎಲ್ಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದೇನೆ ಎಂದು ಹೇಳಿದರು.
ಜನಾರ್ದನರೆಡ್ಡಿಯವರಂತೆ ಮತ್ತಷ್ಟು ಜನ ಬಿಜೆಪಿಗೆ: ಶಾಸಕ ಜನಾರ್ದನರೆಡ್ಡಿ ಅವರು ಮೂಲತಃ ಬಿಜೆಪಿಯವರೇ. ವಿಶೇಷವಾಗಿ ನನಗೆ ಅತ್ಮೀಯರುಮ ಬಳ್ಳಾರಿಯಲ್ಲಿ ಪಕ್ಷ ಸಂಘಟನೆ, ಹೋರಾಟ, ಪ್ರಚಾರದಲ್ಲಿ ಅವರೊಂದಿಗೆ ತೊಡಗಿದ್ದೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬಿಜೆಪಿ ಸೇರ್ಪಡೆಯಾಗಿರುವುದು ಸ್ವಾಗತಾರ್ಹವಾದುದು ಎಂದು ಶೆಟ್ಟರ ಹೇಳಿದರು. ಜನಾರ್ದನರೆಡ್ಡಿ ಅವರಂತೆಯೇ ಅನೇಕರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಪಕ್ಷದ ರಾಜ್ಯ, ರಾಷ್ಟ್ರ ನಾಯಕರನ್ನು ಸಂಪರ್ಕಿಸುತ್ತಿದ್ದಾರೆ ಎಂದು ತಿಳಿಸಿದರು.