For the best experience, open
https://m.samyuktakarnataka.in
on your mobile browser.

ಮೋದಿಯಂತಹ ಮಹಾನ್ ಶಕ್ತಿ ಸೋಲಿಸಲು ಸಾಧ್ಯವಿಲ್ಲ

10:23 PM May 02, 2024 IST | Samyukta Karnataka
ಮೋದಿಯಂತಹ ಮಹಾನ್ ಶಕ್ತಿ ಸೋಲಿಸಲು ಸಾಧ್ಯವಿಲ್ಲ

ಅಳ್ನಾವರ: ಜಗತ್ತಿನಲ್ಲಿ ಭಾರತವನ್ನು ಅಭಿವೃದ್ಧಿಯಲ್ಲಿ ಉತ್ತುಂಗಕ್ಕೇರಿಸಿದ ಮಹಾನ ಶಕ್ತಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಧಾರವಾಡ ಕ್ಷೇತ್ರದಲ್ಲಿ ಪ್ರಲ್ಹಾದ ಜೋಶಿಯವರನ್ನು ಬೆಂಬಲಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಕರೆ ನೀಡಿದರು
ಅಳ್ನಾವರದಲ್ಲಿ ಆಯೋಜಿಸಿದ್ದ ಬಿಜೆಪಿ ಪ್ರಚಾರಾರ್ಥ ಸಭೆಯಲ್ಲಿ ರೋಡ ಶೋ ಮೂಲಕ ಮತಯಾಚನೆ ನಡೆಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಈಗ ನಡೆಯುತ್ತಿರುವ ಚುನಾವಣೆ ದೇಶದ ಬೆಳವಣಿಗೆಗಾಗಿ ಇರುವಂತಹ ಚುನಾವಣೆಯಾಗಿದೆ, ಈ ಚುನಾವಣೆ ಆತ್ಮನಿರ್ಭರ ಭಾರತ ಮತ್ತು ರಾಮರಾಜ್ಯ ನಿರ್ಮಾಣದ ಚುನಾವಣೆಯಾಗಿದೆ. ಇದನ್ನೆಲ್ಲ ಅರಿತುಕೊಂಡು ದೇಶದ ಸುಭದ್ರತೆ ಮತ್ತು ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವದು ಅವಶ್ಯವಿದೆ ಎಂದರು.
ಮೋದಿಯವರನ್ನು ಸೋಲಿಸಲು ಎಲ್ಲಾ ವಿಪಕ್ಷಗಳು ಒಂದಾಗಿವೆ ಆದರೂ ಮೋದಿಯವರನ್ನು ಸೋಲಿಸಲು ಸರಳವಾದ ಕಾರ್ಯವಲ್ಲ, ದೇಶ ಸೇವೆಯನ್ನೇ ತನ್ನ ಜೀವನವನ್ನಾಗಿಸಿಕೊಂಡಿರುವ ಪ್ರಧಾನಿಯವರಂತಹ ವ್ಯಕ್ತಿ ನಮಗೆ ಬೇಕಾಗಿದೆ ಎಂದ ಏಕನಾಥ ಶಿಂಧೆ ಅವರು, ದೇಶದ ನೂರಾರು ಕೋಟಿ ಜನರ ಭಾವನೆಯಂತೆ ರಾಮ ಮಂದಿರ ನಿರ್ಮಾಣ ಮಾಡಿದ್ದು, ಜೊತೆಗೆ ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಿದ ಮೋದಿಯವರು ಒಂದು ದೇಶ ಒಂದು ಧ್ವಜ ಎನ್ನುವದನ್ನು ತೋರಿಸಿಕೊಟ್ಟಿದ್ದಾರೆ. ಅವರಂತೆ ಹುಬ್ಬಳ್ಳಿಯಲ್ಲಿ ಈದಗಾ ಮೈದಾನದಲ್ಲಿ ಧ್ವಜ ಹಾರಿಸಿದ ಸರಳ ಸಜ್ಜನಿಕೆಯ ವ್ಯಕ್ತಿಯಾಗಿರುವ ಜೋಶಿಯವರನ್ನು ಬಹುಮತದಿಂದ ಗೆಲ್ಲಿಸುವಂತೆ ಒತ್ತಿ ಹೇಳಿದರು.