For the best experience, open
https://m.samyuktakarnataka.in
on your mobile browser.

ಮೋದಿ ಪಕ್ಷ ಸೇರಿದ ಭ್ರಷ್ಟ ಜನಾರ್ದನ ರೆಡ್ಡಿ

09:55 PM Mar 25, 2024 IST | Samyukta Karnataka
ಮೋದಿ ಪಕ್ಷ ಸೇರಿದ ಭ್ರಷ್ಟ ಜನಾರ್ದನ ರೆಡ್ಡಿ

ಹುಬ್ಬಳ್ಳಿ: ಭ್ರಷ್ಟಾಚಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ, ಕಡುಭ್ರಷ್ಟ ಜನಾರ್ದನ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಸಚಿವ ಸಂತೋಷ ಲಾಡ್ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಷ್ಟೇ ಭ್ರಷ್ಟರಾದರೂ ಬಿಜೆಪಿಗೆ ಸೇರ್ಪಡೆಗೊಂಡರೆ ಶುದ್ಧರಾಗುತ್ತಾರೆ. ಅವರನ್ನು ವಾಷಿಂಗ್ ಪೌಡರ್ ಹಾಕಿ ಸ್ವಚ್ಛ ಮಾಡುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು. ಅಲ್ಲದೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅತ್ಯಂತ ಕಡಿಮೆ ಸೀಟುಗಳು ಬರುತ್ತವೆ ಎಂದು ಸರ್ವೆ ವರದಿ ಬಂದಿದೆ. ಹೀಗಾಗಿ ಬಿಜೆಪಿಗರು ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳನ್ನು ವಿಲೀನಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಈ ಹಿಂದೆ ಶೇ. ೩೭ರಷ್ಟು ಮತಗಳು ಬಂದಿದ್ದವು. ಇದೀಗ ಶೇ. ೨೯ರಷ್ಟು ಮಾತ್ರ ಮತಗಳು ಬರಬಹುದು. ದೇಶದಾದ್ಯಂತ ೨೦೦ರ ಗಡಿ ಬಿಜೆಪಿ ದಾಟುವುದಿಲ್ಲ ಎಂದರು.
ಪ್ರಲ್ಹಾದ್ ಜೋಶಿ, ಮೋದಿ ಅವರ ಬಗ್ಗೆ ನಾನು ಯಾವತ್ತೂ ವೈಯಕ್ತಿಕ ಟೀಕೆ ಮಾಡಿಲ್ಲ. ಜೋಶಿ ಅವರ ಜೊತೆ ಅನೇಕ ಬಾರಿ ಫ್ಲೈಟ್‌ನಲ್ಲಿ ಪ್ರಯಾಣ ಮಾಡಿದ್ದೇನೆ. ನಮ್ಮ ನಡುವೆ ನಡೆದ ಸಂವಾದದ ಬಗ್ಗೆ ಜೋಶಿ ಅವರು ತಿರುಚಿ, ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.