ರಾತ್ರಿ ಪೂರ್ತಿ ರಭಸದ ಮಳೆ: ನಾಲಾಗಳಾದ ನಗರದ ರಸ್ತೆಗಳು
ಹುಬ್ಬಳ್ಳಿ : ಹುಬ್ಬಳ್ಳಿ - ಧಾರವಾಡ ಮಹಾನವರ ಸೇರಿದಂತೆ ಜಿಲ್ಲೆಯ ಹಲವು ಕಡೆ ರಾತ್ರಿಯಿಂದ ಬೆಳಗಿನವರೆಗೆ ಧಾರಾಕಾರ ಮಳೆ ಸುರಿಯಿತು.
ಹುಬ್ಬಳ್ಳಿಯಲ್ಲಿ ಸುರಿದ ಮಳೆಗೆ ಚರಂಡಿ ನಾಲಾಗಳು ತುಂಬಿ ಹರದಿವು. ಉಣಕಲ್ ಪ್ರದೇಶ, ಸಾಯಿನಗರ, ಹೆಗ್ಗೇರಿ ಕಾಲೋನಿ, ಮುರಡೇಶ್ವರ ಫ್ಯಾಕ್ಟರಿ ರಸ್ತೆ ,ಉಣಕಲ್ ಕೆರೆ ಭಾಗಸ ಕೆಳ ಪ್ರದೇಶ ಸೇರಿದಂತೆ ತಗ್ಗು ಪ್ರದೇಶದ ಬಡಾವಣೆಗೆ ನೀರು ನುಗ್ಗಿತು.
ಬೆಳಿಗ್ಗೆ ,8 ಗಂಟೆಗೆ ಮಳೆ ನಿಂತರೂ ಚರಂಡಿ, ನಾಲಾಗಳು ತುಂಬಿ ಹರಿಯುತ್ತಿದ್ದವು.
ಉಣಕಲ್ ಕ್ರಾಸ್, ಹಳೆ ಬಸ್ ನಿಲ್ದಾಣ ಮುಂಭಾಗ, ಉಣಕಲ್ ಕೆರೆ ಪ್ರೆಸಿಡೆಂಟ್ ಹೊಟೇಲ್ ಹತ್ತಿರ ಅವಳಿನಗರ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಬಡಾವಣೆಯ ರಸ್ತೆಗಳೇ ನಾಲಾ ಸ್ವರೂಪ ಪಡೆದಿದ್ದವು. ಮ್ಯಾನ್ ಹೋಲ್ ಒಪನ್ ಆಗಿದ್ದು ಕೊಳಚೆ ನೀರು ರಸ್ತೆಯಲ್ಲಿ ಹರಿಯಿತು.
ಮಳೆ ಅಬ್ಬರಕ್ಕೆ ರೈತರ ಪರದಾಟ : ಮಳೆ ಅಬ್ಬರಕ್ಕೆ ರೈತರು ನಲುಗಿದ್ದಾರೆ. ಹತ್ತಿ ಹೊಡೆ ಒಡೆಯುತ್ತಿದ್ದು, ಅನೇಕ ರೈತರು ಹತ್ತಿ ಬಿಡಿಸುತ್ತಿದ್ದರು. ಮಳೆ ಬಂದು ಹತ್ತಿ ನೀರು, ಮಣ್ಣು ಪಾಲಾಗಿದೆ. ಮಳೆ ನೀರಿನೊಂದಿಗೆ ಹೊಲದ ಮಣ್ಣು ಹತ್ತಿ ಹೊಡೆಗೆ ಸಿಡಿದು ಬೆಳೆ ಹಾಳಾಗಿದೆ.
ಹಿಂಗಾರಿ ಬೆಳೆಗಳಾದ ಕಡಲೆ, ಕುಸುಬಿ, ಗೋದಿ ಬಿತ್ತನೆಗೆ ಭೂಮಿ ಹದಗೊಳಿಸುತ್ತಿದ್ದರು.
ಎರಡು ದಿನಗಳಿಂದ ಸುರಿದ ಮಳೆಯಿಂದ ದಿಕ್ಕು ತೋಚದಾಗಿದೆ: ಇನ್ನು ಕೆಲ ರೈತರು ಹೆಸರು ಉತ್ಪನ್ನ ಮಾರಾಟ ಮಾಡದೇ ಹೆಚ್ಚಿನ ಬೆಲೆ ನಿರೀಕ್ಷೆಯಲ್ಲಿ ಮನೆ ಕಟ್ಟೆ, ಮನೆಗಳಲ್ಲಿ ನಿಟ್ಟು ಕಟ್ಟಿಟ್ಟುಕೊಂಡಿದ್ದು, ದಿಢೀರ್ ಮಳೆಗೆ ಹೆಸರಿನ ಚೀಲ ತೊಯ್ದಿವೆ. ಉತ್ಪನ್ನ ರಕ್ಷಣೆಗೆ ನವಲಗುಂದ, ಕುಂದಗೋಳ, ಧಾರವಾಡ ತಾಲೂಕಿನ ರೈತರು ರಾತ್ರಿ ಪೂರ್ತಿ ತಾಡಪತ್ರಿ ಹಿಡಿದು ಮುಚ್ಚಿದರು.
ಇನ್ನು ಹುಬ್ಬಳ್ಳಿ - ಧಾರವಾಡ ಹೆದ್ದಾರಿ ಬೈಪಾಸ್ನಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಗಂಟೆಗಟ್ಟಲೆ ವಾಹನ ಸಾಲುಗಟ್ಟಿ ನಿಂತಿದ್ದವು.