ವಯನಾಡ್ ದುರಂತ: ಭೂಕುಸಿತದ ಬಗ್ಗೆ ಮೊದಲೇ ಮುನ್ನೆಚ್ಚರಿಕೆ ನೀಡಲಾಗಿತ್ತು…
ನವದೆಹಲಿ: ಕೇರಳದಲ್ಲಿ ಭೂಕುಸಿತದ ಬಗ್ಗೆ ಜುಲೈ 23ಕ್ಕೆ ಎಚ್ಚರಿಕೆ ನೀಡಲಾಗಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ವಯನಾಡಿನಲ್ಲಿ ಭೂಕುಸಿತ ಸಂಭವಿಸುವ ಒಂದು ವಾರದ ಮೊದಲು ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರಕ್ಕೆ ಕೇಂದ್ರವು ಎಚ್ಚರಿಕೆ ನೀಡಿತ್ತು, ದಕ್ಷಿಣ ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯ ನಂತರ ಕೇಂದ್ರವು ಒಂಬತ್ತು ಎನ್ಡಿಆರ್ಎಫ್ ತಂಡಗಳನ್ನು ಕೇರಳಕ್ಕೆ ಕಳುಹಿಸಿತ್ತು. ಕೇರಳ ಸರ್ಕಾರ ಸಕಾಲದಲ್ಲಿ ಜನರನ್ನು ಸ್ಥಳಾಂತರಿಸಲಿಲ್ಲ, ನರೇಂದ್ರ ಮೋದಿ ಆಡಳಿತಾವಧಿಯಲ್ಲಿ 2016 ರಿಂದಲೇ ವಿಪತ್ತುಗಳಿಗಾಗಿ ದೇಶವು ಅತ್ಯಾಧುನಿಕ ಎಚ್ಚರಿಕೆ ವ್ಯವಸ್ಥೆಯನ್ನು ಹೊಂದಿದೆ, ಈ ವ್ಯವಸ್ಥೆಯಿಂದ ಬಂದ ಮಾಹಿತಿಯ ಆಧಾರದ ಮೇಲೆ ಒಂದು ವಾರ ಮುಂಚಿತವಾಗಿ ಮುನ್ನೆಚ್ಚರಿಕೆಯನ್ನು ಕಳುಹಿಸಲಾಗಿತ್ತು, ಜುಲೈ 25 ಮತ್ತು 26ರಂದು ಭಾರೀ ಮಳೆ ಮತ್ತು ಭೂಕುಸಿತ ಸಂಭವಿಸಿದೆ. ಈ ಎಚ್ಚರಿಕೆಗಳನ್ನು ಪಾಲಿಸುವ ಮೂಲಕ ಅನೇಕ ರಾಜ್ಯಗಳು ಜೀವ ಮತ್ತು ಆಸ್ತಿ ನಷ್ಟವನ್ನು ಬಹಳವಾಗಿ ಕಡಿಮೆ ಮಾಡಿದೆ ಎಂದು ಅವರು ಹೇಳಿದರು. ಗುಜರಾತ್ ಮತ್ತು ಒಡಿಶಾ ಇದಕ್ಕೆ ಉದಾಹರಣೆ ಎಂದು ಹೇಳಿದರು. ನೈಸರ್ಗಿಕ ವಿಕೋಪಗಳ ಬಗ್ಗೆ ಕನಿಷ್ಠ ಏಳು ದಿನಗಳ ಮುಂಚಿತವಾಗಿ ಎಚ್ಚರಿಕೆ ನೀಡಬಲ್ಲ ನಾಲ್ಕು ದೇಶಗಳಲ್ಲಿ ಭಾರತವೂ ಸೇರಿದೆ ಎಂದು ಶಾ ಹೇಳಿದರು. ಎನ್ಡಿಆರ್ಎಫ್ ತಂಡಗಳು ಬಂದ ನಂತರ ಕೇರಳ ಸರ್ಕಾರ ಎಚ್ಚೆತ್ತುಕೊಂಡಿದ್ದರೆ ಭೂಕುಸಿತದಿಂದ ಉಂಟಾಗುವ ಸಾವುನೋವುಗಳನ್ನು ಕಡಿಮೆ ಮಾಡಬಹುದಿತ್ತು ಎಂದು ಅವರು ಹೇಳಿದರು. ವಯನಾಡ್ ದುರಂತವನ್ನು ಎದುರಿಸಲು ನಮ್ಮ ಸರ್ಕಾರ ಶಕ್ತಿಮೀರಿ ಶ್ರಮಿಸುತ್ತಿದೆ ಎಂದಿದ್ದಾರೆ.