For the best experience, open
https://m.samyuktakarnataka.in
on your mobile browser.

ಕ್ಷಣ ಕ್ಷಣದಲ್ಲೂ, ಒಳಹೊರಗೂ ಭಗವಂತನಿದ್ದಾನೆ

04:29 AM Apr 24, 2024 IST | Samyukta Karnataka
ಕ್ಷಣ ಕ್ಷಣದಲ್ಲೂ  ಒಳಹೊರಗೂ ಭಗವಂತನಿದ್ದಾನೆ
PRATHAPPHOTOS.COM

ಇದು ಭಾಗ್ಯವಯ್ಯ ದೇಹದ ಒಳಗೆ ಹೊರಗೆ ಕಾಲರೂಪದಿಂದ ಪರಮಾತ್ಮ ಇದ್ದಾನೆ. ಕಾಲ ನಿಯಮಕನಾದಂತಹ ಭಗವಂತ ರೂಪಗಳಿಂದ ತುಂಬಿಕೊಂಡಿದ್ದಾನೆ.
ಕಾಲ ಅಂತಹ ದೊಡ್ಡ ವಸ್ತು. ಒಂದೊಂದು ಕ್ಷಣಗಳಲ್ಲಿ ಭಾಗಗಳಿವೆ. ಒಂದೊಂದು ಕ್ಷಣಗಳ ಕಳೆದಂತೆ ಒಂದೊಂದು ಭಾಗವಿದೆ. ಹೋದ ಕ್ಷಣ ಮತ್ತೆ ಬರುವುದಿಲ್ಲ. ಚೆನ್ನಾಗಿ ಅಭ್ಯಾಸ ಮಾಡು, ಸಾಧನೆ ಮಾಡಿಕೋ ಹೋದ ಕಾಲ ಮತ್ತೆ ತಿರುವಿ ಬರುವುದಿಲ್ಲ ಎಂದು ಹಿರಿಯರು ಹೇಳುತ್ತಾರೆ.
ಆ ಹೋದ ಒಂದೊಂದು ಕ್ಷಣಗಳಲ್ಲಿ ದೇವರಿದ್ದಾನೆ ಒಂದೊಂದು ಕ್ಷಣಗಳನ್ನು ಹುಟ್ಟಿಸುವ ದೇವರು, ಆ ಕ್ಷಣವನ್ನು ನೇಮನ ಮಾಡುವಂತ ಕ್ಷಣದೊಳಗೆ ಇದ್ದವನು ದೇವರು. ಆ ಒಂದೊಂದು ಕ್ಷಣ ಇಡೀ ವಿಶ್ವದಲ್ಲಿದೆ. ಆ ಕ್ಷಣದಲ್ಲಿ ಒಂದು ದೇಶಕ್ಕೆ ಕತ್ತಲು ಒಂದು ದೇಶಕ್ಕೆ ಬೆಳಕು ಇರಬಹುದು. ಆ ಕ್ಷಣದೊಳಗ ಅಂತರ್ಯಾಮಿಯಾದ ಭಗವಂತ ಇಡೀ ವಿಶ್ವದಲ್ಲಿದ್ದಾನೆ.
ನಮ್ಮ ಸುತ್ತಮುತ್ತಲು ದೇವರು ಎಷ್ಟು ರೂಪಗಳಿಂದ ಇದ್ದಾನೆ ಎಂಬುದನ್ನು ಊಹೆ ಮಾಡಲು ಸಾಧ್ಯವಿಲ್ಲ. ಅಂತಹ ಕಾಲ ನಿಯಾಮಕವಾದ ಇಡೀ ವಿಶ್ವದಲ್ಲೇ ವ್ಯಾಪ್ತವಾದ, ಯಾವ ಕಾಲಕ್ಕೂ ಸ್ಮರಿಸಿದರೆ ಒದಗಿ ಬರುವ ಎಲ್ಲ ಕಾಲದಲ್ಲಿ ಅಂತರ್ಯಾಮಿಯಾದ ಪರಮಾತ್ಮ ಎಲ್ಲವನ್ನು ಗಮನಿಸುವಂತಹ ತ್ರಿಕಾಲ ಧ್ಯಾನಿ. ಇಡೀ ಜಗತ್ತಿನಲ್ಲಿ ಇರುವ ಎಲ್ಲರ ಸುಖ-ದುಃಖಗಳನ್ನು ಕರ್ಮಗಳನ್ನು ತಿಳಿದವ, ಎಲ್ಲರ ಸುಖ-ದುಃಖಗಳನ್ನು ಅರ್ಥ ಮಾಡಿಕೊಂಡವ, ಎಲ್ಲ ಸಮಸ್ಯೆಗಳನ್ನು ಅರಿತವ ಸಮಸ್ಯೆಗಳಿಗೆ ಪರಿಹಾರವನ್ನು ಕೊಡುವವ ಭಗವಂತ. ಅಂತಹ ಒಳಗೂ ಹೊರಗೂ ಇರುವ ಭಗವತ್ ರೂಪವನ್ನು ಚಿಂತನೆ ಮಾಡಿದರೆ ನಮ್ಮಷ್ಟು ಪುಷ್ಟಿವಂತರು ಯಾರಿಲ್ಲ. ಆ ತರಹದ ಪುಷ್ಟಿ ಪಡೆದುಕೊಂಡಾಗುವ ನಮಗಾಗುವ ತುಷ್ಟಿ ಅದು ಅನಿರ್ವಚನೀಯ ಮತ್ತು ವರ್ಣನಾತೀತ.
ವರ್ಣಿಸಲು ಅಸಾಧ್ಯವಾದಂತಹ ಭಗವಂತನ ಮಹಿಮೆಗಳಿವೆ, ಅದರೊಳಗೆ ಹೇಳಲು ಸಾಧ್ಯವಾದಂತ ಪರಮ ಕ್ರಮಗಳಿವೆ ಅವುಗಳನ್ನು ನನ್ನ ಯೋಗ್ಯತೆಗೆ ತಕ್ಕಂತೆ ಎಷ್ಟನ್ನು ನಾನು ತಿಳಿಯಬಹುದು ಅಷ್ಟನ್ನು ಮಾತ್ರ ಕಿಂಚಿತ್ ಸಂಕೋಚ ಪಡದೆ ಎಲ್ಲವನ್ನು ಬಿಡಿಸಿ ಹೇಳಬೇಕು. ಏಳೆ ದಿನಗಳಲ್ಲಿ ತಕ್ಷಕ ಬಂದು ಕಚ್ಚುತ್ತಾನೆ ಎಂದು ಶೃಂಗಿ ಶಾಪ ಕೊಟ್ಟ. ಅದು ಶಾಪವೋ ವರವೋ? ಜ್ಞಾನಿಗಳು ನನ್ನನ್ನು ಉದ್ಧಾರ ಮಾಡಬೇಕು ಎಂದು, ಎಲ್ಲಾ ಋಷಿಗಳು ಕೂಡ, ತಾವು ರುದ್ರಾಂಶ ಸಂಭೂತರು ಪರಮಾನುಗ್ರಹ ಮಾಡಿ ನನ್ನನ್ನು ಉದ್ದಾರ ಮಾಡಲು ಬಂದಿರುವಿರಲ್ಲ ಇದಕ್ಕಿಂತ ದೊಡ್ಡ ಭಾಗ್ಯವೇನು? ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ. ನಾವು ತಪ್ಪು ಮಾಡಿದರೆ ಮೃತ್ಯುವನ್ನ ಕೊಡುತ್ತಾನೆ ಮರಣೋತ್ತರದಲ್ಲಿ ನರಕವನ್ನು ಕೊಡುತ್ತಾನೆ. ಘೋರವಾದ ಅಪರಾಧವನ್ನು ಮಾಡಿದರೆ ಅದಕ್ಕೆ ಪೂರಕವಾದ ಶಿಕ್ಷೆಯನ್ನೇ ಕೊಡುತ್ತಾನೆ. ಅದೇ ಧರ್ಮವನ್ನು ಮಾಡಿದರೆ ಪರಮಾತ್ಮನಲ್ಲಿ ಭಕ್ತಿಯನ್ನು ಮಾಡಿದರೆ ಪರೋಪಕಾರವನ್ನು ಮಾಡಿದರೆ ತಂದೆ ತಾಯಿ ಸೇವೆಯನ್ನು ಮಾಡಿದರೆ, ತೀರ್ಥಯಾತ್ರೆ ಮಾಡಿದರೆ ಶಾಸ್ತ್ರದಲ್ಲಿ ವಿಹಿತವಾದ ಕರ್ಮಗಳನ್ನು ಶ್ರದ್ಧೆಯಿಂದ ಮಾಡಿದರೆ ಅನಾಮಯ ಜೀವನವನ್ನು ಕೊಡುತ್ತಾನೆ.